
ಬೆಂಗಳೂರು :
ನಗರದಲ್ಲಿ ಕುಡಿಯುವ ನೀರಿನ ಅನಗತ್ಯ ಬಳಕೆಯನ್ನು ತಡೆಯಲು ಜಲಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ದಂಡ ಕ್ರಮವನ್ನು ಜೋರಾಗಿ ಮುಂದುವರಿಸಿದೆ. ಕಳೆದ ಒಂದು ವಾರದಲ್ಲಿ ನಡೆಸಿದ ಪರಿಶೀಲನೆ ವೇಳೆ 112 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 5.60 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ಜಲಮಂಡಳಿಯ ಅಧ್ಯಕ್ಷ ಡಾ. ರಾಮ್ ಪ್ರಸಾದ್ ಮನೋಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ 17 ರಂದು ಜಲಮಂಡಳಿಯಿಂದ ಹೊರಡಿಸಿದ ಸೂಚನೆಯ ಪ್ರಕಾರ, ಕುಡಿಯುವ ನೀರನ್ನು ಅನಗತ್ಯವಾಗಿ ಬಳಸುವುದು ಕಾನೂನುಬಾಹಿರ ಎಂದು ಘೋಷಿಸಲಾಗಿದೆ. ಇದಾದ ಬಳಿಕ ಜಲಮಂಡಳಿಯ ಅಧಿಕಾರಿಗಳು ವಿವಿಧ ಪ್ರದೇಶಗಳಲ್ಲಿ ತಪಾಸಣೆ ನಡೆಸಿ, ನೀರಿನ ದುರ್ವಹಾರದಲ್ಲಿ ತೊಡಗಿದವರ ವಿರುದ್ಧ ದಂಡ ವಿಧಿಸಲು ಕ್ರಮ ಕೈಗೊಂಡಿದ್ದಾರೆ.
ನೀರಿನ ಕೊರತೆಯನ್ನು ಎದುರಿಸಲು ಮತ್ತು ಎಲ್ಲರಿಗೂ ಸಮಾನವಾಗಿ ನೀರು ಪೂರೈಕೆ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಸರ್ಕಾರದಿಂದ ಮುನ್ನೆಚ್ಚರಿಕಾ ಕ್ರಮಗಳಾಗಿ ಜನತೆಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳು ಜಾರಿಗೊಳಿಸಲಾಗಿವೆ.
ಡಾ. ರಾಮ್ ಪ್ರಸಾದ್ ಮನೋಹರ್ ಅವರು, “ನೀರು ಸಂರಕ್ಷಣೆ ಎಲ್ಲರ ಜವಾಬ್ದಾರಿ. ಅನಗತ್ಯವಾಗಿ ನೀರು ಬಳಸದಂತೆ ನಾಗರಿಕರು ಜಾಗರೂಕರಾಗಬೇಕು. ನೀರಿನ ದುರ್ಬಳಕೆ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರಿಸಲಾಗುವುದು,” ಎಂದು ತಿಳಿಸಿದ್ದಾರೆ.
ಜಲಮಂಡಳಿ ನಗರದಲ್ಲಿನ ನೀರಿನ ಬಳಕೆಯ ಮೇಲೆ ನಿಗಾ ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತಪಾಸಣೆ ನಡೆಸಲು ಯೋಜನೆ ರೂಪಿಸಿದೆ.