
ಮೈಸೂರು :
ಉದಯಗಿರಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರೂಪೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತರ ಕಚೇರಿಯ ಆಟೋಮೇಷನ್ ಸೆಂಟರ್ಗೆ ಅವರನ್ನು ಕಳುಹಿಸುವಂತೆ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಅವಕಾಶ ಇದ್ದರೂ ನಿರ್ಲಕ್ಷ್ಯ ತೋರಿ ಗಲಾಟೆ ತಡೆಯಲು ವಿಫಲರಾದ ಆರೋಪ ಅವರ ಮೇಲೆ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಆಕ್ಷೇಪಾರ್ಹ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ ಆರೋಪಿಯಾದ ಸತೀಶ್ ಆಲಿಯಾಸ್ ಪಾಂಡುರಂಗನನ್ನು ರೂಪೇಶ್ ಠಾಣೆಗೆ ಕರೆತಂದರೂ, ಬೆಳಗ್ಗೆಯಿಂದ ಸಂಜೆವರೆಗೆ ಯಾವುದೇ ಕ್ರಮ ಕೈಗೊಳ್ಳದೆ ತಡಮಾಡಿದ್ದರು ಎನ್ನಲಾಗಿದೆ. ಈ ಕಾರಣದಿಂದ ಮುಸ್ಲಿಂ ಯುವಕರ ಗುಂಪು ಗುಂಪುಗೂಡಿ ಗಲಾಟೆ ನಡೆಸಿದ ಘಟನೆ ನಡೆದಿದೆ.
ರೂಪೇಶ್ ಅವರ ನಿರ್ಲಕ್ಷ್ಯ ಹಾಗೂ ಇತರ ಹಲವು ಆರೋಪಗಳ ಹಿನ್ನೆಲೆಯಲ್ಲಿ ಈ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಉದಯಗಿರಿಯಲ್ಲಿ ಭದ್ರತಾ ಕ್ರಮಗಳನ್ನು ಬಲಪಡಿಸುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಬಲ ಗಮನ ಹರಿಸಿರುವುದಾಗಿ ತಿಳಿದುಬಂದಿದೆ.