
ಉಡುಪಿ ಜಿಲ್ಲೆ, ಬ್ರಹ್ಮಾವರ: ತಾಲ್ಲೂಕಿನ ಕೊಕ್ಕರ್ಣೆ ಸಮೀಪ ಕಾಡುರೂನಿಯಲ್ಲಿ ಫೆಬ್ರವರಿ 5, ಬುಧವಾರ ಬೆಳಿಗ್ಗೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಬೀಜಾಡಿಯ ಜಯಲಕ್ಷ್ಮೀ (68) ಎಂದು ಗುರುತಿಸಲಾಗಿದೆ. ಗಾಯಗೊಂಡ ರಾಮಚಂದ್ರ ಭಟ್, ಸುಜಾತಾ, ಮಂಗಳ, ಪ್ರೇಮಾ ಎಂಬವರನ್ನು ತಕ್ಷಣವೇ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದುರಂತ ಬೆಳವಣಿಗೆ ಕಬ್ಬಿನಾಲೆ ಜಾತ್ರೆ ಮುಗಿಸಿ ಮಂದಾರ್ತಿ, ಸಾಲಿಗ್ರಾಮ, ಹಾಗೂ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಅಪಘಾತ ಸಂಭವಿಸಿದ್ದು, ಸ್ಥಳೀಯರು ಗಾಯಾಳುಗಳಿಗೆ ತಕ್ಷಣವೇ ಸಹಾಯ ನೀಡಿದರು.
ಘಟನೆಯ ಮಾಹಿತಿ ಪಡೆದ ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
– ವರದಿ: ಆರತಿ ಗಿಳಿಯಾರು, ಉಡುಪಿ ಜಿಲ್ಲೆ