
ತುಮಕೂರು ಜಿಲ್ಲೆಯಲ್ಲಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಮಂಜೂರಾತಿ ಸಂಬಂಧಿತ ನಿಯಮಗಳನ್ನು ಸಡಿಲಗೊಳಿಸುವಂತೆ ಪ್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ಪ್ರತಿನಿಧಿಗಳು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮೀಣ ಪತ್ರಕರ್ತರಿಗೆ ಯಾವುದೇ ನಿಶ್ಚಿತ ವೇತನ ವ್ಯವಸ್ಥೆ ಇಲ್ಲದ ಕಾರಣ, ಬಸ್ ಪಾಸ್ಗಾಗಿ ಅಗತ್ಯವಿರುವ ವೇತನಪತ್ರ ದಾಖಲೆಗಳನ್ನು ನೀಡಲು ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ, ವೇತನಪತ್ರದ ಬದಲಿಗೆ ಕೇವಲ ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಪಾಸ್ಬುಕ್ ನಕಲನ್ನು ಪರಿಗಣಿಸಲು ನಿಯಮವನ್ನು ಸಡಿಲಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅದೇ ರೀತಿ, ಬಸ್ ಪಾಸ್ ಪಡೆಯಲು ಹೊಂದಿರುವ ಸೇವಾನುಭವದ ಅವಧಿಯನ್ನು 4 ವರ್ಷಗಳಿಂದ 2 ವರ್ಷಗಳಿಗೆ ಕಡಿಮೆ ಮಾಡುವ ಮೂಲಕ ಹೆಚ್ಚಿನ ಗ್ರಾಮೀಣ ಪತ್ರಕರ್ತರಿಗೆ ಈ ಸೌಲಭ್ಯ ಲಭಿಸಬೇಕು ಎಂಬುದು ಪತ್ರಕರ್ತರ ಸಂಘದ ಮತ್ತೊಂದು ಪ್ರಮುಖ ಬೇಡಿಕೆ.
ಈ ಸಂದರ್ಭದಲ್ಲಿ ಪ್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಸಿ.ಡಿ. ಕೃಷ್ಣಮೂರ್ತಿ, ಉಪಾಧ್ಯಕ್ಷ ನಾದೂರು ವಾಸದೇವ, ಕಾರ್ಯದರ್ಶಿ ಸ್ವಾಮಿ ಲಿಂಗಪ್ಪ, ಖಜಾಂಚಿ ಚಂದ್ರಶೇಖರ್, ತುಮಕೂರು ಜಿಲ್ಲಾ ಉಪಾಧ್ಯಕ್ಷ ಕುಮಾರಸ್ವಾಮಿ ಜಿ.ಕೆ., ನಿರ್ದೇಶಕರಾದ ಜಗದೀಶ್ ಬಿ., ಗೋವಿಂದಪ್ಪ, ಸಿದ್ಧರಾಜು, ಮಾಲತೇಶ್, ಸತೀಶ್ ಮತ್ತು ಅನಿಲ್ ಉಪಸ್ಥಿತರಿದ್ದರು.
ಪತ್ರಕರ್ತರ ಈ ಮನವಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತೆಗೆದುಕೊಂಡು, ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ.