
ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತೂವರಿ ಮಾಡಿದ ಆರೋಪದ ಮೇಲೆ ಬೀಟ್ ಫಾರೆಸ್ಟರ್ಗಳಾದ ಉಮೇಶ್ ಮತ್ತು ಇಮ್ರಾನ್ ಮೇಲೆ ಹಲ್ಲೆ ನಡೆದಿದ್ದು, ಸಂಬಂಧಪಟ್ಟ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಫ್ಒ ಮೋಹನ್ ಕುಮಾರ್ ಹೇಳಿದರು. ಈ ಬಗ್ಗೆ ಪಟ್ಟಣದಲ್ಲಿ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ತಾಲೂಕಿನ ಚಿಕ್ಕಲಗೋಡು ಗ್ರಾಮದಲ್ಲಿ ಶಿರಸಿ ಭಾಗದಿಂದ ಆನೆಗಳ ಹಿಂಡು ತಿರುಗಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತಾದ್ದರಿಂದ ಬೀಟ್ ಫಾರೆಸ್ಟರ್ಗಳು ಸ್ಥಳಕ್ಕೆ ತೆರಳಿದ್ದರು.

ಅಲ್ಲಿ ಅರಣ್ಯ ಪ್ರದೇಶದಲ್ಲಿ ಅನಾನಸ್ ಬೆಳೆಸಿ ಗಿಡಗಳನ್ನು ಕಡಿಯುತ್ತಿದ್ದ ದೃಶ್ಯವನ್ನೂ ಕಂಡು, ಬೀಟ್ ಫಾರೆಸ್ಟರ್ಗಳು ಪ್ರಶ್ನಿಸಿದಾಗ ರಶೀದ್ ಬನವಾಸಿ ಎಂಬಾತ ದಿಢೀರ್ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಫಾರೆಸ್ಟರ್ಗಳನ್ನು ಸೊರಬದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಅಕ್ರಮದಲ್ಲಿ ಭಾಗಿಯಾಗಿದ್ದ ಶಿವಪ್ಪ ಈರಪ್ಪ ಮತ್ತು ಬಸಪ್ಪ ಈರಪ್ಪ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಇವರಿಂದ ಗುತ್ತಿಗೆ ಪಡೆದು ಅನಾನಸ್ ಬೆಳೆದಿದ್ದ ರಫೀಕ್ ಬನವಾಸಿ ಪರಾರಿಯಾಗಿದ್ದಾನೆ ಎಂದು ತಿಳಿಸಿದರು.
ಅಕ್ರಮವಾಗಿ ಅರಣ್ಯದಲ್ಲಿ ಸಂಚರಿಸಿದ ಲಾರಿಯನ್ನು ವಶಪಡಿಸಿಕೊಂಡು, ಅದರಲ್ಲಿ ಸಾಗಿಸುತ್ತಿದ್ದ ಅನಾನಸ್ ಹಣ್ಣನ್ನು ನ್ಯಾಯಾಲಯದ ಅನುಮತಿಯಿಂದ ನೆನ್ನೆ ಸಂಜೆ ಹರಾಜು ಮಾಡಲಾಗಿದೆ