
ಕೊಡಗು ಜಿಲ್ಲೆ :
ಪೊನ್ನಂಪೇಟೆ ತಾಲೂಕಿನ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ವಾರದಿಂದ ಸುಂಟಿಕೊಪ್ಪ ಹೋಬಳಿಯ ಏಳನೇ ಹೊಸಕೋಟೆಯ ಹೋಟೆಲ್, ಕಂಬಿಬಾಣೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಪ್ಪುತೋಡು ಕಾರ್ಮಿಕರ ವಸತಿ ಪ್ರದೇಶ ಸೇರಿದಂತೆ ಹಲವು ಸ್ಥಳಗಳಲ್ಲಿ ಕಳ್ಳತನ ಪ್ರಕರಣಗಳು ಸಂಭವಿಸುತ್ತಿದ್ದು, ಈ ಪ್ರಕರಣವನ್ನು ಬೇಧಿಸಲು ಪೊಲೀಸರಿಗೆ ತಲೆ ನೋವಾಗಿತ್ತು.
ಕೊನೆಗೂ ಕಳ್ಳನ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಸಾಮಾಜಿಕ ಜಾಲತಾಣಗಳ ಮೂಲಕ ಶಂಕಿತ ವ್ಯಕ್ತಿಯ ಫೋಟೊವನ್ನು ಹಂಚಿ, ಜನಸಾಮಾನ್ಯರ ಸಹಾಯವನ್ನು ಕೋರಿದರು. ಈ ಮೂಲಕ, ಶಂಕಿತ ವ್ಯಕ್ತಿ ವಿರಾಜಪೇಟೆಯಲ್ಲಿ ಕಂಡುಬಂದು, ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಬಂಧಿತ ಆರೋಪಿ ಸುಬ್ರಮಣಿ, ಶ್ರೀಮಂಗಲ-ಕುಟ್ಟ ನಿವಾಸಿಯಾಗಿದ್ದು, ಈ ಹಿಂದೆ ಪೊನ್ನಂಪೇಟೆಯಲ್ಲಿಯೂ ಕಳ್ಳತನದ ಆರೋಪವನ್ನು ಎದುರಿಸುತ್ತಿದ್ದ. ಇದರಿಂದ, ಪೊಲೀಸರು ಆತನನ್ನು ನ್ಯಾಯಾಲಯದ ಅನುಮತಿ ಪಡೆದು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.