
ಗುಬ್ಬಿ: ತಾಲೂಕಿನ ವ್ಯಾಪ್ತಿಗೆ ಬರುವ ಬಿದರೆ, ಎಂ ಎನ್ ಕೊಟೆ, ಬಂಡಿಹಳ್ಳಿ, ದೂಡ್ಡಗುಣ್ಣಿ ಸೇರಿದಂತೆ ನಾಲ್ಕು ಎಂ ಎಸ್ ಐ ಎಲ್ ಮದ್ಯದ ಅಂಗಡಿಗಳ ಮೇಲೆ ಗುರುವಾರ ರಾತ್ರಿ ಕಳ್ಳರು ಕೈಚಳಕ ತೋರಿಸಿ ಹಣ ಹಾಗೂ ಮದ್ಯದ ಬಾಟಲಿಗಳನ್ನು ಕಳವು ಮಾಡಿರುವ ಸುದ್ದಿ ಬಂದಿದೆ. ಒಂದೇ ದಿನದಲ್ಲಿ ನಾಲ್ಕು ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಿರುವುದು ಆಶ್ಚರ್ಯಕರ ಸಂಗತಿ.
ಈ ಘಟನೆ ಸಂಭವಿಸಲು ಪೊಲೀಸ್ ಇಲಾಖೆ ನಿದ್ರೆಗೆ ಜಾರಿರುವುದೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ವೈಫಲ್ಯದಿಂದ ತಾಲೂಕಿನಲ್ಲಿ ಕಳ್ಳರ ಕೈಚಳಕ ಜಾಸ್ತಿಯಾಗಿದೆ ಎಂಬ ಅಭಿಪ್ರಾಯ ನಾಗರಿಕರಲ್ಲಿ ಮೂಡಿದೆ.
ಗುಬ್ಬಿ ತಾಲೂಕಿನಲ್ಲಿ ಈಗಾಗಲೇ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು,ಪ್ರಕರಣ ತಡೆಯಲು ಪೊಲೀಸ್ ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಕಳ್ಳರ ಕೃತ್ಯಗಳಿಗೆ ನಾಗರಿಕರು ತುತ್ತಾಗುವ ಸಾಧ್ಯತೆ ಇದೆ ಎಂಬ ಆತಂಕ ನಾಗರಿಕರಲ್ಲಿ ಮೂಡಿದೆ.
ತಾಲೂಕಿಗೆ ಪೊಲೀಸ್ ಸಿಬ್ಬಂದಿಗಳ ಕೊರತೆ ಇದ್ದಲ್ಲಿ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಿ ಅಥವಾ ಹೋಂ ಗಾರ್ಡ್ ನೇಮಕ ಮಾಡಿಕೊಳ್ಳುವುದು ಅಗತ್ಯ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಳ್ಳರ ಕೃತ್ಯಗಳು ಮತ್ತಷ್ಟು ಹೆಚ್ಚುವ ಸಂಭವವಿದ್ದು, ಜನತೆ ಬೆಚ್ಚಿಬೀಳುವ ಪರಿಸ್ಥಿತಿ ಎದುರಾಗಬಹುದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.