
7 ಮಂದಿಗೆ ಗಾಯ, ಮಾದಾವರ ಬಳಿ ಘಟನೆ
ಬೆಂಗಳೂರು: ನೆಲಮಂಗಲದ ಮಾದಾವರ (Madavara, Nelamangala) ಬಳಿ ಭಾರೀ ಅಪಘಾತ ಸಂಭವಿಸಿದೆ. ಸಹೋದರನ ಮನೆಯಿಂದ ಊಟ ಮುಗಿಸಿ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಹುಡುಗಿಯೊಬ್ಬಳು ಸುಟ್ಟು ಕರಕಲಾದ ದಾರುಣ ಘಟನೆ ನಡೆದಿದೆ.
ಬೆಂಗಳೂರು- ತುಮಕೂರು ಹೈವೆಯ ಮಾದಾವರ ಟೋಲ್ ಬಳಿ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಓಮ್ನಿ ಕಾರಿಗೆ ಬಲೆನೋ ಕಾರು ಹಿಂಬದಿಯಿಂದ ಡಿಕ್ಕಿಯೊಡೆದ ಪರಿಣಾಮ ಓಮ್ನಿಕಾರು ಪಲ್ಟಿಯಾಗಿ ಬೆಂಕಿಗಾಹುತಿಯಾಗಿದೆ. ಕಾರಿನಲ್ಲಿ ಒಟ್ಟು 8 ಜನ ಪ್ರಯಾಣ ಮಾಡ್ತಿದ್ರು. ಏಳು ಜನಕ್ಕೆ ಸುಟ್ಟ ಗಾಯಗಳಾಗಿದ್ರೇ 15 ವರ್ಷದ ಹುಡುಗಿಯೊಬ್ಬಳು ಸಜೀವ ದಹನವಾಗಿದ್ದಾಳೆ.

ಸ್ಥಳಕ್ಕೆ ಬೇಟಿ ಕೊಟ್ಟು ಪರಿಶೀಲನೆ ನಡೆಸಿದ ಬೆಂಗಳೂರು ಗ್ರಾಮಾಂತರ ಎಸ್. ಪಿ ಮಲ್ಲಿಕಾರ್ಜುನ್ ಬಾಲಾದಂಡಿ ನಂತರ ಘಟನೆಯ ವಿವರ ನೀಡಿದ್ರು. ತುಮಕೂರು ರಸ್ತೆ ಹೈವೇಯಲ್ಲಿ 10ಗಂಟೆ ರಾತ್ರಿಯಲ್ಲಿ ಘಟನೆ ನಡೆದಿದೆ. ಬಲೆನೋ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಮುಂದಿದ್ದ ಕಾರು ಎರಡು ಮೂರು ಪಲ್ಟಿ ಆಗಿದ್ದು ನಂತರ ಬೆಂಕಿ ಹತ್ತಿಕೊಂಡಿದೆ.
ಇನ್ನು ಡಿಕ್ಕಿಯೊಡೆದ ಬಲೆನೋ ಕಾರಿನಲ್ಲಿದ್ದವರನ್ನು ಪರಿಶೀಲನೆ ನಡೆಸಬೇಕಿದೆ. ಅವರು ಮದ್ಯ ಸೇವಿಸಿ ಚಾಲನೆ ಮಾಡಿದ್ರಾ ಅನ್ನೋ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಸದ್ಯ ಎಲ್ಲರಿಗೂ ಚಿಕಿತ್ಸೆ ನೀಡಲಾಗ್ತಿದೆ ಎಂದು ಮಾಹಿತಿ ನೀಡಿದ್ರು.
ಒಟ್ಟಾರೆ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಖುಷಿಯಿಂದ ಮನೆಗೆ ವಾಪಸ್ ಆಗುತ್ತಿದ್ದ ಕುಟುಂಬಕ್ಕೆ ದೊಡ್ಡ ಅಘಾತವಾಗಿದೆ. ಮನೆ ಮಗಳು ಧಗಧಗನೇ ಹೊತ್ತಿ ಉರಿಯುತ್ತಿದ್ರೂ ಕಾಪಾಡಲಾಗದ ದುಸ್ಥಿತಿ ನಿರ್ಮಾಣವಾಗಿದ್ದು ದುರಂತ.
