
ಬೆಂಗಳೂರು: ‘ಪೊಲೀಸ್ ಇನ್ಸ್ಪೆಕ್ಟರ್’ ಹೆಸರಿನಲ್ಲಿ ಜನರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪದಡಿ ಬೆಸ್ಕಾಂನ ಸಹಾಯಕ ಎಂಜಿನಿಯರ್ ಗಂಗಾಧರ್ ಅವರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಗಂಗಾಧರ್ ಪೊಲೀಸ್ ಇನ್ಸ್ಪೆಕ್ಟರ್ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ. ಜತೆಗೆ, ತನ್ನ ಕಾರಿಗೆ ಪೊಲೀಸ್ ಜಾಗೃತದಳದ ಬೋರ್ಡ್ ಅಳವಡಿಕೆ ಮಾಡಿಕೊಂಡಿದ್ದ. ಇದರಿಂದ ಆತನಿಗೆ ಹೆದ್ದಾರಿ ಟೋಲ್ ಫ್ರೀ ಹಾಗೂ ಪ್ರವಾಸಿ ಸ್ಥಳಗಳಲ್ಲಿ ವಿಐಪಿ ಆದ್ಯತೆ ದೊರಕುತ್ತಿತ್ತು.
ಇನ್ನು ಬಂಧಿತ ಆರೋಪಿ ಗಂಗಾಧರನನ್ನು ಯಾರಾದರೂ ಪ್ರಶ್ನೆ ಮಾಡಿದರೇ, ಆತ ಪೊಲೀಸ್ ಇನ್ಸ್ಪೆಕ್ಟರ್ ಐಡಿ ತೋರಿಸುತ್ತಿದ್ದನು. ಅಲ್ಲದೇ, ಆತನ ಮೇಲೆ ಬೆಸ್ಕಾಂ ಇಲಾಖೆ ನೀಡಿದ್ದ ವಾಕಿಟಾಕಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪವೂ ಇದೆ.
ಭೂ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ವತಿಯಿಂದ ಪರಿಹಾರ ಕೊಡಿಸುವುದಾಗಿ ಹೇಳಿ ಕೆಲ ರೈತರಿಗೂ ಆರೋಪಿ ವಂಚಿಸಿದ್ದರೆಂಬ ಮಾಹಿತಿ ಇದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಆರೋಪಿ ಹಲವು ವರ್ಷಗಳಿಂದ ವಂಚನೆ ಮಾಡುತ್ತಿರುವ ಬಗ್ಗೆ ಪುರಾವೆಗಳು ಸಿಕ್ಕಿವೆ. ಹೀಗಾಗಿ, ಪ್ರಕರಣದ ತನಿಖೆಯನ್ನು ಸಿಸಿಬಿ ಅಧಿಕಾರಿಗಳು ಮುಂದುವರಿಸಿದ್ದಾರೆ’ ಎಂದು ತಿಳಿಸಿದರು.
BESCOM